17/02/2026
IMG-20260216-WA0013

ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ ಸಚಿವರ ಹೇಳಿಕೆ

ಬೆಳಗಾವಿ-16: ಉರಿ ಬಿಸಿಲನ್ನು ಲೆಕ್ಕಿಸದೇ ಕೆಲಸ ಮಾಡುವ ಬಂಜಾರ ಸಮುದಾಯದವರು ಸ್ವಾಭಿಮಾನಿಗಳು. ನಿಷ್ಠೆ, ಪ್ರಾಮಾಣಿಕತೆ, ಪರಿಶ್ರಮಕ್ಕೆ ಮತ್ತೊಂದು ಹೆಸರೇ ಬಂಜಾರ ಸಮಾಜ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಳಗಾವಿಯ ಕಲ್ಮೇಶ್ವರ ನಗರದ ಲಮಾಣಿ ತಾಂಡಾದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ, ಮಾತನಾಡಿದ ಸಚಿವರು, ಬಂಜಾರ ಸಮಾಜದ ಯುವಕರು ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂಬುದೇ ನನ್ನ ಅಭಿಲಾಷೆ. ಇಂತ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಮಾಜದ ಮುಂದೆ ಬಂದಿದೆ ಎಂದು ನೀವೆಲ್ಲಾ ತೋರಿಸಿಕೊಟ್ಟಿದ್ದೀರಿ ಎಂದರು.

ಸಂತ ಸೇವಾಲಾಲ್‌ ಅವರು ಬಂಜಾರ ಸಮುದಾಯವನ್ನು ಎತ್ತರಕ್ಕೇರಿಸಬೇಕು ಎಂದು ಕನಸು ಕಂಡಿದ್ದರು. ಅವರೊಬ್ಬ ಪವಾಡ ಪುರುಷರಾಗಿದ್ದರು, ಬ್ರಿಟಿಷರು, ಮೈಸೂರು ಮಹಾರಾಜರ ವಿರುದ್ಧವೇ ಸಮಾಜಕೋಸ್ಕರ ಧ್ವನಿ ಎತ್ತಿದ್ದರು. ಇಂತ ಸಮಾಜ ಸುಧಾರಕನ ಕೆಲಸಗಳಿಂದ ಸ್ಫೂರ್ತಿ ಪಡೆದ ಹೈದರಾಬಾದ್‌ ನಿಜಾಮರು ಹೈದರಾಬಾದ್‌ನ ಪ್ರದೇಶವೊಂದಕ್ಕೆ ಬಂಜಾರ ಹಿಲ್ಸ್‌ ಎಂದು ಹೆಸರಿಟ್ಟಿದ್ದಾರೆ ಎಂದು ಹೇಳಿದರು.

ಒಂದು ಸಮಾಜವನ್ನು ಸುಧಾರಣೆ ಮಾಡಬೇಕೆಂದರೆ, ಆ ಸಮಾಜದಿಂದ ಒಬ್ಬ ಯುಗ ಪುರುಷರ ಹುಟ್ಟಿ ಬರಬೇಕು. ದೀನದಲಿತರ ಉದ್ದಾರಕ್ಕಾಗಿ ಅಂಬೇಡ್ಕರ್‌ ಬಂದರೆ, ವೀರಶೈವ ಲಿಂಗಾಯತ ಸಮಾಜದ ಸುಧಾರಣೆಗಾಗಿ ಬಸವಣ್ಣ ತನ್ನದೇ ಕೊಡುಗೆ ನೀಡಿದ್ದಾರೆ. 1739ರಲ್ಲಿ ಸಂತ ಸೇವಾಲಾಲ್‌ ಅವರು ಬಂಜಾರ ಸಮುದಾಯ ಸುಧಾರಣೆಗಾಗಿ ಹೋರಾಡಿದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಸ್ಮರಿಸಿದರು.

ಬಂಜಾರ ಸಮುದಾಯದ ದೇವಸ್ಥಾನ ಕಟ್ಟಲು 30 ಲಕ್ಷ ರೂಪಾಯಿ ದೇಣಿಗೆ ನೀಡದ್ದೇನೆ. ಸಮಾಜಕ್ಕೆ ಶಾಂತಿ ಮತ್ತು ಸನ್ಮಾರ್ಗವನ್ನು ತೋರಿದ ಮಹಾತ್ಮರ ವಿಚಾರಧಾರೆಗಳು ನಮಗೆಲ್ಲರಿಗೂ ಸದಾ ಸ್ಫೂರ್ತಿದಾಯಕ ಎಂದು ಹೇಳಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಸುರೇಶ ರಾಠೋಡ, ಆನಂದ ಪಮ್ಮಾರ, ಪ್ರಕಾಶ ರಾಠೋಡ, ಹಣಮಂತ ರಾಠೋಡ, ರಾಜು ರಾಠೋಡ, ರಾಮು ಪೂಜೇರಿ, ಬಸು ಪಮ್ಮಾರ, ಲಚ್ಚಪ್ಪ ಪಮ್ಮಾರ, ಅಪ್ಪು ಪಾಟೀಲ, ಮಂಜುನಾಥ ರಾಠೋಡ, ಮಾರುತಿ ಚೌಹಾಣ್‌ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!