ಬೆಳಗಾವಿ-10 : ಹಲವು ವರ್ಷಗಳಿಂದ ರೂ.100ರ ಛಾಪಾ ಕಾಗದದ ಮೇಲೆ ಖರೀದಿಸಲ್ಪಟ್ಟ 20×40 ಹಾಗೂ 30×40 ಅಳತೆಯ ನಿವೇಶನಗಳಿಗೆ ಮಾನ್ಯತೆ ದೊರಕದೆ ಸಂಕಷ್ಟ ಅನುಭವಿಸುತ್ತಿದ್ದ ಬಡ, ಮಧ್ಯಮ ಹಾಗೂ ಸಾಮಾನ್ಯ ವರ್ಗದ ಜನರಿಗೆ ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರದಿಂದ ದೊಡ್ಡ ಮಟ್ಟದ ನೆಮ್ಮದಿ ದೊರೆತಿದೆ ಎಂದು ಉತ್ತರ ರಕರ್ನಾಟಕ ಅಂಜುಮನ್ ವಿ-ಇಸ್ಲಾಮ್ ಸಂಘವು ಅಭಿನಂದನೆ ಸಲ್ಲಿಸಿತು.
ಸಾಮಾನ್ಯ ಜನರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ಇಂತಹ ನಿವೇಶನಗಳಿಗೆ ಮಾನ್ಯತೆ ನೀಡಿರುವ ಕ್ರಮವನ್ನು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸ್ವಾಗತಿಸಿದ್ದು, ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಜಿಲ್ಲಾದಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.
ಹಲವಾರು ವರ್ಷಗಳಿಂದ ಸಾವಿರಾರು ಕುಟುಂಬಗಳು ತಮ್ಮ ನಿವೇಶನಗಳ ಮಾನ್ಯತೆಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದರು. ಸರ್ಕಾರ ಜನಸಾಮಾನ್ಯರ ಸಂಕಷ್ಟವನ್ನು ಅರ್ಥಮಾಡಿಕೊಂಡು ಮಾನ್ಯತೆ ನೀಡಿರುವುದು ಐತಿಹಾಸಿಕ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಮಾನ್ಯತೆ ಪಡೆದ ನಿವೇಶನಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ವಿದ್ಯುತ್ ಸರಬರಾಜು ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ, ವಿದ್ಯುತ್ ಮೀಟರ್ ಪೂರೈಕೆ ಮತ್ತು ಇತರ ನಾಗರಿಕ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ಕಾರ ಮುಂದೆಯೂ ಬಡವರು ಹಾಗೂ ಜನಸಾಮಾನ್ಯರ ಕುಂದುಕೊರತೆಗಳಿಗೆ ಸ್ಪಂದಿಸಿ ಇಂತಹ ಜನಪರ ಮತ್ತು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡು ರಾಜ್ಯಾದ್ಯಂತ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯಲಿ ಎಂದು ಆಗ್ರಹಿಸಿದರು.
ಈ ವೇಳೆ ಹಮೀದ್ ಕೊಪ್ಪದ, ಅಜ್ದುಲ್ ವಾಹಿದ ಅತ್ತಾರ, ಸಲೀಮ್ ಸೇರಿದಂತೆ ಹಲವು ಮುಸ್ಲೀಂ ಮುಖಂಡರು ಉಪಸ್ಥಿತರಿದ್ದರು.
