22/05/2026

ಬೆಳಗಾವಿ-21 : ಭಾರತ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ದಿಸೆಯಲ್ಲಿ “ಸ್ವಚ್ಛ ಸರ್ವೇಕ್ಷಣ ಅಭಿಯಾನ” ವನ್ನು ಹಮ್ಮಿಕೊಳ್ಳಲಾಗಿದೆ ಎಂದು

ಪಾಲಿಕೆಯ ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಹಣಮಂತ ಕಲಾದಗಿ ತಿಳಿಸಿದರು.

IMG 20260521 WA0039 - IMG 20260521 WA0039
ಬುಧವಾರ ಈ ಕುರಿತು ಪಾಲಿಕೆಯ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಭಾರತ ಸರ್ಕಾರವು 2016 ರಿಂದ ” ಸ್ವಚ್ಛ ಭಾರತ್ ಮಿಷನ್ ” ಆರಂಭಿಸಿದ್ದು, ನಗರವಾಸಿಗಳ ಅಭಿಪ್ರಾಯಕ್ಕನುಗುಣವಾಗಿ ಉತ್ತಮ ಪರಿಸರಪೂರಿತ ವಾತಾವರಣ ನಿರ್ಮಿಸುವುದೇ ಇದರ ಮೂಲ ಉದ್ದೇಶವಾಗಿದೆ. ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವ ನಗರ ಪಾಲಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಹುಮಾನ, ಸ್ಟಾರ್ ರ್ಯಾಂಕಿಂಗ್ ಕೊಡುವ ಸಂಪ್ರದಾಯವನ್ನು ಸಹ ಸರ್ಕಾರ ಹೊಂದಿದೆ. ಇಂತಹ ಉತ್ತಮ ಉದ್ದೇಶ ಹೊಂದಿರುವ ಅಭಿಯಾನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯು ಪಾಲ್ಗೊಂಡಿದ್ದು, ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ.ಅವರ ನಿರ್ದೇಶನದಂತೆ ಸ್ವಚ್ಛ ಸರ್ವೇಕ್ಷಣ ಅಭಿಯಾನ ಆರಂಭಿಸಲಾಗಿದೆ. ಈಗಾಗಲೇ ಅಭಿಯಾನದಲ್ಲಿ ಪಾಲ್ಗೊಂಡು ನಗರದ ಸುಮಾರು 16 ಸಾವಿರ ಜನ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇ. 5ರಷ್ಟು ಜನ ತಮ್ಮ ಅಭಿಪ್ರಾಯ ತಿಳಿಸಿದರೆ ನಿಗದಿತ ಗುರಿ ಮುಟ್ಟಬಹುದು. ಕಸ, ಶೌಚಾಲಯ ನಿರ್ವಹಣೆ ಸೇರಿದಂತೆ ಒಟ್ಟು ಐದು ಪ್ರಶ್ನೆಗಳ ಸರಣಿ ಇದ್ದು, ಅಭಿಯಾನದ ಯಾಪ್ ಮೂಲದ ಸ್ಕ್ಯಾನರನ್ನು ಸ್ಕ್ಯಾನ್ ಮಾಡಿ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಅಭಿಪ್ರಾಯ ತಿಳಿಸಬಹುದು. ಪಾಲಿಕೆಯಿಂದ ಅಭಿಯಾನದ ಪ್ರತಿನಿಧಿಗಳು ಸಹ ವಿವಿಧ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಅವರೊಂದಿಗೆ ಸಹಕರಿಸಿ ಇಲ್ಲವೇ ಸ್ವತಹ ತಾವೇ ಯಾಪ್ ಮೂಲಕ ಅಭಿಪ್ರಾಯಗಳನ್ನು ತಿಳಿಸಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ಅಭಿಯಂತರ ಹಣಮಂತ ಕಲಾದಗಿ ಸಾರ್ವಜನಿಕರಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!