08/02/2026
IMG-20260206-WA0002

ಮೂಡಲಗಿ-06:ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ನೀಡಿದ ಉಡಾನ ಯೋಜನೆಯ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ದೇಶದ ಅನೇಕ ನಗರಗಳಿಗೆ ಈ ಮೊದಲು ವಿಮಾನಯಾನ ಸಂಸ್ಥೆಗಳು ಒದಗಿಸುತ್ತಿದ್ದ ಸೇವೆಯನ್ನು ರದ್ದು ಪಡಿಸಿವೆ. ಇದರಿಂದಾಗಿ ನಾಗರಿಕರಿಗೆ ಹಾಗೂ ರಕ್ಷಣಾ ಪಡೆಗಳ ಸೈನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಜಿಲ್ಲೆಯ ಜನರ ಅನುಕೂಲಕ್ಕಾಗಿ ಮುಂಬೈ, ಪುಣೆ, ಚೆನ್ನೈ, ಇಂದೋರ್ ಹಾಗೂ
ಜೈಪುರ ನಗರಗಳಿಗೆ ವಿಮಾನ ಸಂಪರ್ಕವನ್ನು ತಕ್ಷಣವೇ ಪ್ರಾರಂಭಿಸಬೇಕೆಂದು ಸಂಸತ್ತಿನ ಬಜೆಟ್ ಅಧಿವೇಶನದ ಶೂನ್ಯ ವೇಳೆಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿಯವರು ಕೇಂದ್ರ ಸರ್ಕಾರದವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಎರಡನೇ ರಾಜಧಾನಿಯಾದ ಬೆಳಗಾವಿಯಲ್ಲಿರುವ ವಿಮಾನ ನಿಲ್ದಾಣವನ್ನು 1942ರಲ್ಲಿ ‘ರಾಯಲ್ ಏರ್ ಫೋರ್ಸ್’ ವತಿಯಿಂದ
ನಿರ್ಮಿಸಲಾಗಿತ್ತು. ಬೆಳಗಾವಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮೂರು ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಿದೆ ಹಾಗೂ
ಬೆಳಗಾವಿಗೆ 5 ವಿಮಾನಯಾನ ಸಂಸ್ಥೆಗಳ ಮೂಲಕ 13 ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೇವಲ 2
ವಿಮಾನಯಾನ ಸಂಸ್ಥೆಗಳು ಮಾತ್ರ ಉಳಿದಿದ್ದು, ಕೇವಲ 5 ನಗರಗಳಿಗೆ ಮಾತ್ರ ಸಂಪರ್ಕವು ಸೀಮಿತವಾಗಿದೆ. ಕೇಂದ್ರ ಸರ್ಕಾರವು ಬೆಳಗಾವಿ
ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ಹೆಚ್ಚಿಸಲು 262.64 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಟರ್ಮಿನಲ್ ಕಟ್ಟಡ’ ಮತ್ತು 25.98
ಕೋಟಿ ರೂಪಾಯಿಗಳ ವೆಚ್ಚದಲ್ಲಿ ‘ಏಪ್ರನ್’ ವಿಸ್ತರಣೆಗೆ ವೆಚ್ಚ ಮಾಡುತ್ತಿದೆ.

ಬೆಳಗಾವಿ ಮರಾಠಾ ಲೈಟ್ ಇನ್ಸೆಂಟ್ರಿ, ಐಟಿಬಿಪಿ, ಕಮಾಂಡೋ ತರಬೇತಿ ಕೇಂದ್ರ ಮತ್ತು ವಾಯುಪಡೆ ತರಬೇತಿ ಕೇಂದ್ರ ಸೇರಿದಂತೆ ರಕ್ಷಣಾ
ಇಲಾಖೆಯ ಹಲವು ಘಟಕಗಳನ್ನು ಹೊಂದಿದೆ. ಬೆಳಗಾವಿಯು ಶೈಕ್ಷಣಿಕ, ವೈದ್ಯಕೀಯ ಮತ್ತು ಕೈಗಾರಿಕಾ ಕೇಂದ್ರವಾಗಿದೆ. ಈ ಎಲ್ಲ ಕಾರಣದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ದಿನನಿತ್ಯ ಹೊರಗಿನ ರಾಜ್ಯಗಳಿಂದ ಬಂದು ಹೋಗುತ್ತಾರೆ.ಇಂಥಹ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ತಕ್ಷಣ ವಿಮಾನಯಾನ ಸೇವೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಾರಂಭಿಸಬೇಕೆಂದು ಅವರು ಸದನದಲ್ಲಿ ಒತ್ತಾಯ ಮಾಡಿದರು.

ಕೇಂದ್ರ ಸರ್ಕಾರದ ಉಡಾನ ಯೋಜನೆ ಲಾಭ ಸಿಗುವವರೆಗೆ ಮಾತ್ರ ಈ ಸಂಸ್ಥೆಗಳು ಸೇವೆಯನ್ನು ನೀಡುತ್ತಿದ್ದು, ಸಬ್ಸಿಡಿಯ ಅವಧಿ ಮುಗಿದ ತಕ್ಷಣ, ಅವು ವಿಮಾನಯಾನವನ್ನು ನಿಲ್ಲಿಸುತ್ತವೆ. ಬೆಳಗಾವಿ ವಿಮಾನ ನಿಲ್ದಾಣದಿಂದ 2024-25ರ ಸಾಲಿನಲ್ಲಿ 3,40,300 ಪ್ರಯಾಣಿಕರು
ಪ್ರಯಾಣಿಸಿದ್ದಾರೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 9% ರಷ್ಟು ಹೆಚ್ಚಳವಾಗಿದೆ. ಇಷ್ಟೊಂದು ಭಾರಿ ಬೇಡಿಕೆಯಿದ್ದರೂ ಸಹ,ವಿಮಾನಯಾನ ಸಂಸ್ಥೆಗಳು ವಿಮಾನ ಸಂಚಾರವನ್ನು ಸ್ಥಗಿತಗೊಳಿಸುತ್ತಿವೆ. ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಮಾರ್ಗಗಳಲ್ಲಿ ‘ಲೋಡ್ ಫ್ಯಾಕ್ಟರ್ ಶೇಕಡಾ 85 ರಿಂದ 95 ರಷ್ಟಿದ್ದು, ವಿಮಾನಗಳು ಶೇಕಡಾ 90 ಕ್ಕಿಂತ ಹೆಚ್ಚು ಸಾಮರ್ಥ್ಯದೊಂದಿಗೆ
ಚಲಿಸುತ್ತಿದ್ದಾಗಲೂ ವಿಮಾನಯಾನ ಸಂಸ್ಥೆಗಳು ಸೇವೆಯನ್ನು ಸ್ಥಗಿತಗೊಳಿಸಿವೆ. ಹೆಚ್ಚಿನ ಲೋಡ್ ಫ್ಯಾಕ್ಟರ್ ಇದ್ದರೂ ಸಹ, ಕೇವಲ ಸಬ್ಸಿಡಿ ಮುಗಿದ ಕಾರಣಕ್ಕೆ ಮಾರ್ಗಗಳನ್ನು ಸ್ಥಗಿತಗೊಳಿಸುವ ವಿಮಾನಯಾನ ಸಂಸ್ಥೆಗಳ ವಿರುದ್ಧ ನಾಗರಿಕ ವಿಮಾನಯಾನ ಸಚಿವಾಲಯವು ಕಠಿಣಕ್ರಮ ಕೈಗೊಳ್ಳಬೇಕೆಂದು ಸಂಸದ ಈರಣ್ಣ ಕಡಾಡಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!