11/12/2025

 

ಬೆಳಗಾವಿ 24 – ರಂಗಸಂಪದ ಬೆಳಗಾವಿ ಇವರು ಇದೇ. ದಿ. 24 ಸೋಮವಾರದಂದು ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಮಾಧ್ಯಮ ಗೋಷ್ಠಿಯನ್ನು ಕರೆದಿದ್ದರು. ರಂಗಸಂಪದ ಸಂಸ್ಥೆಯ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿಯವರು ಮಾತನಾಡಿದರು.

ರಂಗಸಂಪದ ಸಂಸ್ಥೆಯು ಬೆಳಗಾವಿಯ ರಂಗಾಸಕ್ತರ ಮನಗೆದ್ದ ಸಂಸ್ಥೆ. ನಾವು ಪ್ರತಿವರ್ಷ ಸುಮಾರು 15 ನಾಟಕಗಳನ್ನು ನೀಡುತ್ತ ಬಂದಿದ್ದೇವೆ. ರಂಗಸಂಪದ ತನ್ನದೇ ಕಲಾವಿರೊಂದಿಗೆ ರಾಜ್ಯ ಹೊರರಾಜ್ಯಗಳಲ್ಲಿಯೂ ನಾಟಕ ಬೇರೆ ಬೇರೆ ನಾಟಕಗಲ ಪ್ರದರ್ಶನವನ್ನು ನೀಡಿದೆ ಅಲ್ಲದೆ ಬೇರೆ ಬೇರೆ ತಂಡಗಳನ್ನು ಇಲ್ಲಿಗೆ ಆಹ್ವಾನಿಸಿ
ಬೆಳಗಾವಿ ಕಲಾರಸಿಕರಿಗೆ ನೀಡುತ್ತಿದ್ದೇವೆ ಎಂದು ರಂಗಸಂಪದವನ್ನು ಪರಿಚಯಿಸಿದರು.

ಮುಂದೆ ಮಾತನಾಡುತ್ತ ಡಾ. ಅರವಿಂದರು ಇದೇ ದಿನಾಂಕ 27 ಗುರುವಾರದಂದು ಸಾಯಂಕಾಲ 5-30 ಕ್ಕೆ ತಿಳಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ವಿಶ್ವ ರಂಗಭೂಮಿ ದಿನಚಾರಣೆ ಮತ್ತು ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ. 2025 ರ ರಂಗಸಖ ಪ್ರಶಸ್ತಿಯನ್ನು ಖ್ಯಾತ ಮೇಕಪ್ ಕಲಾವಿದರಾದ ಸಂತೋಷ ಮಹಾಲೆ ಇವರಿಗೆ ನೀಡಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿಗಳಾದ ಎಸ್. ಎಂ. ಕುಲಕರ್ಣಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾ.ಚ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಸಿ. ಎಂ. ತ್ಯಾಗರಾಜ ಆಗಮಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅನನ್ಯ ತಂಡ ಬೆಂಗಳೂರು ಇವರಿಂದ ಖ್ಯಾತ ಕಿರುತೆರೆ ಕಲಾವಿದ ಎಸ್. ಎನ್.ಸೇತುರಾಮ ಅವರು ನಿರ್ದೇಶಿಸಿ ಅಭಿನಯಿಸಿರುವ ‘ತಳಿ’ ನಾಟಕ ಪ್ರದರ್ಶನಗೊಳ್ಳಲಿದ್ದು ಶ್ರೀಪತಿ ಮಂಜನಬೈಲು, ಸೌಮ್ಯ ಭಾಗವತ, ಅಪರ್ಣಾ ಗುಮಾಸ್ತೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಿ. 29 ಶನಿವಾರದಂದು ನಮ್ಮದೇ ತಂಡ ರಂಗಸಂಪದದಿಂದ ಖ್ಯಾತ ಲೇಖಕ ಶ್ರೀರಂಗ ಅವರ ರಚನೆಯ ಡಾ. ಅರವಿಂದ ಕುಲಕರ್ಣಿ ನಿರ್ದೇಶನದ ‘ಗೆಳೆಯ ನೀನು ಹಳೆಯ ನಾನು’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕ ಬೆಳಗಾವಿಯಲ್ಲಿ ಈಗಾಗಲೆ ಒಂದು ಯಶಸ್ವಿ ಒಂದು ಪ್ರದರ್ಶನವಾಗಿದ್ದು ಇದು ಎರಡನೇ ಪ್ರದರ್ಶನ. ಅಲ್ಲದೆ ಈ ನಾಟಕ ಮುಂಬೈಯಲ್ಲಿ ಪ್ರದರ್ಶನಗೊಂಡು ಜನರ ಮನಸ್ಸನ್ನು ಗೆದ್ದಿದೆ. ಪದ್ಮಾ ಕುಲಕರ್ಣಿ, ಪವಿತ್ರಾ ರೇವಣಕರ, ರಾಮಚಂದ್ರ ಭಟ್, ಅರವಿಂದ ಪಾಟೀಲ, ಪ್ರಸಾದ ಕಾರಜೋಳ, ವಿನೋದ ಸಪ್ಪಣ್ಣವರ, ಯೋಗೇಶ ದೇಶಪಾಂಡೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಡಾ. ಕುಲಕರ್ಣಿ ಹೇಳಿದರು.

ಮಾಧ್ಯಮ ಮಿತ್ರರಾದ ತಾವೆಲ್ಲ ಹೆಚ್ಚಿನ ಪ್ರಚಾರ ನೀಡಿ ನಮ್ಮ ಶ್ರಮವನ್ನು ಸಾರ್ಧಕಗೊಳಿಸಬೇಕು ಎಂದು ಡಾ. ಅರವಿಂದ ಕುಲಕರ್ಣಿ ವಿನಂತಿಸಿಕೊಂಡರು. ಪ್ರಸಾದ ಕಾರಜೋಳ, ರಾಮಚಂದ್ರ ಕಟ್ಟಿ ಅಶೋಕ ಕುಲಕರ್ಣಿ ಹಾಜರಿದ್ದರು.

error: Content is protected !!