ಬೆಳಗಾವಿ-28 : ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಅಧಿಕೃತವಾಗಿ ಘೋಷಿಸುವಂತೆ ಒತ್ತಾಯಿಸಿ ದೇಶವ್ಯಾಪಿ ನಡೆಯುತ್ತಿರುವ ಸಹಿ ಅಭಿಯಾನದ ಎರಡನೇ ಹಂತದ ಭಾಗವಾಗಿ, ಬೆಳಗಾವಿ ಜಿಲ್ಲೆಯಲ್ಲಿ ಸಂಗ್ರಹಿಸಲಾದ 1,80,000 (ಒಂದು ಲಕ್ಷ ಎಂಬತ್ತು ಸಾವಿರ) ಅರ್ಜಿದಾರರ ಸಹಿ ಪತ್ರಗಳ ಬೃಹತ್ ಮನವಿಯನ್ನು ಜಿಲ್ಲಾಡಳಿಕ್ಕೆ ಮೂಲಕ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಕರ್ನಾಟಕದ ರಾಜ್ಯಪಾರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆಯ ರ್ಯಾಲಿ ನಡೆಸಿದರು. ಈ ಮೆರವಣಿಗೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು, ಗೋಭಕ್ತರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ‘ಜೈ ಕರ್ನಲಾ’ ಹಾಗೂ ಗೋಮಾತೆಯ ಪರ ಜಯಘೋಷಗಳನ್ನು ಕೂಗಿದರು.
*ಅಭಿಯಾನದ ಮುಖ್ಯ ಉದ್ದೇಶ*
”ಗೋಮಾತೆಯ ಸಂಪೂರ್ಣ ರಕ್ಷಣೆ, ಸಂರಕ್ಷಣೆ ಮತ್ತು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗೋವಿನ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸಬೇಕು,” ಎಂದು ಕಾರ್ಯಕ್ರಮದ ಸಂಘಟಕರು ಹಾಗೂ ಪ್ರಮುಖರು ಒತ್ತಾಯಿಸಿದರು.
ಈ ವೇಳೆ ಗೋ ರಕ್ಷಕರಾದ ನೀಲೇಶ್, ಮಾರುತಿ ಕೋಳಿ, ಆನಂದ ನವಲೆ, ಆನಂದ ಶೆಟ್ಟಿ, ಸುರೇಂದ್ರ ಭಂಡಾರಿ, ಪ್ರಕಾಶ್ ಲಾಡವ, ಸೂರಜ್, ಮುಕುಂದ, ಅರುಣ್ ಕುಮಾರ್ ಹಾಗೂ ರಾಜು ಬಾಗೇವಾಡಿ ಸೇರಿದಂತೆ ಹಲವು ಮುಖಂಡರು, ಶ್ರೀ ಚಿದಂಬರ ಕಳಕಗಿರಿ ಮತ್ತಿತರ ಪೂಜ್ಯ ಸ್ವಾಮೀಜಿಗಳು ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು..
