
ಬೆಳಗಾವಿ-29 : ಇಲ್ಲಿಯ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆಯ ಕಲಾವಿದರು ಪ್ರಸ್ತುತಪಡಿಸಿದ ಸೆಕೆಂಡ್ ಹ್ಯಾಂಡ್ ಸದಾಶಿವ ನಾಟಕ ಪ್ರದರ್ಶನದುದ್ದಕ್ಕೂ ಪ್ರೇಕ್ಷಕರನ್ನು ನಕ್ಕು ನಗಿಸುವ ಮೂಲಕ ಯಶಸ್ವಿ ಪ್ರಯೋಗವೆನಿಸಿತು.
ಮಂಗಳವಾರ ಸಂಜೆ ನಡೆದ ಪ್ರದರ್ಶನದಲ್ಲಿ ಕಿಕ್ಕಿರಿದು ಪ್ರೇಕ್ಷಕರು ತುಂಬಿದ್ದರು. ಸುಮಾರು 50 ನಿಮಿಷಗಳ ನಾಟಕ ಆರಂಭದಿಂದ ಅಂತ್ಯದವರೆಗೂ ನಿರಂತರ ನಗಿಸುವ ಮೂಲಕ ಪ್ರೇಕ್ಷಕರನ್ನು ಕದಲದಂತೆ ಮಾಡಿತು.
ಎಂ. ಎಸ್. ನರಸಿಂಹಮೂರ್ತಿ ರಚಿಸಿರುವ ಈ ನಾಟಕವನ್ನು ಶರಣಗೌಡ ಪಾಟೀಲ ಅವರು ನಿಿಿರ್ದೇಶಿಸಿದ್ದಲ್ಲದೆ, ಸಂಗೀತ ನಿರ್ದೇಶನ, ರಂಗವಿನ್ಯಾಸ ಮತ್ತು ಬೆಳಕಿನ ವಿನ್ಯಾಸವನ್ನೂ ಮಾಡಿದ್ದರು. ವಾಮನ ಮಳಗಿ ಸದಾಶಿವನಾಗಿ, ಶಾಂತಾ ಆಚಾರ್ಯ ಇಂದ್ರಾಣಿಯಾಗಿ, ಶಿರೀಶ್ ಜೋಶಿ ಪಾಪಣ್ಣನಾಗಿ, ವಿಶ್ವನಾಥ ದೇಸಾಯಿ ಬಾಸ್ ಬಾಲರಾಜ ಆಗಿ, ಅನುಶ್ರೀ ರಘುವೀರ ಊದಬತ್ತಿ ಉರ್ಮಿಳೆಯಾಗಿ, ಶರಣಯ್ಯ ಮಠಪತಿ ಮೋಹನನಾಗಿ ಮನೋಜ್ಞವಾಗಿ ಅಭಿನಯಿಸಿದರು. ಗುರುದತ್ತ ಪೆಡ್ನೆಕರ್ ನೆಳಲು- ಬೆಳಕಿನ ವಿನ್ಯಾಸ ನೀಡಿದರು.
ಲೋಕೋಪಯೋಗಿ ಇಲಾಖೆ ಕಾಯನಿರ್ವಾಹಕ ಇಂಜಿನಿಯರ್ ಪ್ರವೀಣ ಹುಲಜಿ ಕಾರ್ಯಕ್ರಮ ಉದ್ಘಾಟಿಸಿ, ಮೊಬೈಲ್ ಗಳಿಗೆ ಅಂಟಿಕೊಳ್ಳುವ ಇಂದಿನ ದಿನಗಳಲ್ಲಿ ಜನರು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಂದಿರುವುದು ಒಳ್ಳೆಯ ಬೆಳವಣಿಗೆ. ಇಂತಹ ನಾಟಕಗಳು ಜನರಲ್ಲಿ ಹೊಸ ಜೀವನೋತ್ಸಾಹ ತುಂಬಲಿದೆ. ರಂಗಸೃಷ್ಟಿಯ ಎಲ್ಲ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡಲಾಗುವುದು ಎಂದರು.
ಅತಿಥಿಗಳಾಗಿ ಸಮಾಜ ಸೇವಕರಾದ ಬಸವರಾಜ ಕಾಮಗಾರಕರ ಹಾಗೂ ಆಕ್ಮೆ ಇಂಜಿನಿಯರಿಂಗ್ ವರ್ಕ್ಸ್ನ ಪುಂಡಲೀಕ ಅವರು ಭಾಗವಹಿಸಿದ್ದರು. ರಂಗಸೃಷ್ಟಿ ನಿರ್ದೇಶಕರಾದ ಡಾ.ರಾಮಕೃಷ್ಣ ಮರಾಠೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ಶರಣಯ್ಯ ಮಠಪತಿ ನಿರೂಪಿಸಿದರು. ಅಧ್ಯಕ್ಷತೆಯನ್ನು ರಂಗಸೃಷ್ಟಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಮೇಶ ಜಂಗಲ ವಹಿಸಿದ್ದರು. ಉಪಾಧ್ಯಕ್ಷರಾದ ಎಂ.ಕೆ.ಹೆಗಡೆ, ಶೈಲಜಾ ಭಿಂಗೆ, ಹಿರಿಯ ರಂಗಕರ್ಮಿ ಬಿ.ಎಸ್.ಗವಿಮಠ, ಕನ್ನಡಭವನದ ಕಾರ್ಯದರ್ಶಿ ಯ.ರು.ಪಾಟೀಲ ಉಪಸ್ಥಿತರಿದ್ದರು. ಪ್ರಸಾದ ಪಂಡಿತ, ಬಿ.ಎಸ್.ಗವಿಮಠ, ಶಶಿಧರ ಹೊಸಕೋಟೆ ನಾಟಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
