
‘ಬೆಳಗಾವಿ-20:ನಾರಿ ಶಕ್ತಿ ವಂದನೆ’ ಎಂಬ ಹೆಸರಿನ ಕಾಯ್ದೆಯನ್ನು ಲೋಕಸಭೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್ ತಾನು ನಾರಿ ಶಕ್ತಿ ವಿರೋಧಿ, ಮಹಿಳಾ ವಿರೋಧಿ ಎನ್ನುವುದನ್ನು ಘಂಟಾಘೋಷವಾಗಿ ಸಾರಿದೆ. ಸಾಮಾನ್ಯ ಮಹಿಳೆಯರೂ ಲೋಕಸಭೆಯಲ್ಲಿ, ರಾಜ್ಯಗಳ ವಿಧಾನಸಭೆಯಲ್ಲಿ ಪ್ರತಿನಿಧಿಗಳಾಗಬೇಕು ಎನ್ನುವುದು ಭಾರತೀಯ ಜನತಾ ಪಕ್ಷದ ನಿಲುವಾಗಿದ್ದರೆ, ಶತಾಯಗತಾಯ ಮಹಿಳೆಯರು ಹಿಂದುಳಿದವರೇ ಆಗಬೇಕು ಎನ್ನುವುದು ಕಾಂಗ್ರೆಸ್ , ಸಮಾಜವಾದಿ, ಡಿಎಂಕೆ ಸೇರಿದಂತೆ ಇಂಡಿ ಒಕ್ಕೂಟದ ನಿಲುವು.
ಲೋಕಸಭೆಯಲ್ಲಿ ಈ ಪಕ್ಷಗಳು ಅಡ್ಡಗಾಲು ಹಾಕಿದ ಕಾರಣಕ್ಕಾಗಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲು ಮಸೂದೆ ಮತ್ತೆ ಸೋಲು ಕಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತು ದೇಶದಲ್ಲಿ 33% ಮಹಿಳಾ ಶಾಸಕಿಯರು ಮತ್ತು ಸಂಸದರನ್ನು ಕಾಣುವ ಅವಕಾಶ ತಪ್ಪಿ ಹೋಗಿದೆ.
ಸ್ವತಃ ಮಹಿಳಾ ಸಂಸದೆಯಾದ ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿಯವರು ಮಹಿಳಾ ಮೀಸಲು ಮಸೂದೆ ಜಾರಿಯಾದರೆ ಪ್ರಜಾಪ್ರಭುತ್ವವೇ ಇಲ್ಲವಾಗಲಿದೆ ಎನ್ನುವ ಮೂಲಕ ಕಾಂಗ್ರೆಸ್ ಎಷ್ಟರಮಟ್ಟಿಗೆ ಮಹಿಳಾ ವಿರೋಧಿ ಎನ್ನುವುದಕ್ಕೆ ಸಾಕ್ಷಿ ನುಡಿದಿದ್ದರು. ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ತನ್ನ ಅಧಿನಾಯಕಿಯರು ಮಾತ್ರವೇ ಮಹಿಳಾ ಸಂಸದರಾಗಿರಬೇಕು!
ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ಕುರಿತು ಇದ್ದ ಕಾಳಜಿ ಕೇವಲ ನಾಟಕ ಎನ್ನುವುದು ಸಾಬೀತಾಗಿದೆ. ಇಂದು ಮಸೂದೆಗೆ ಸೋಲಾಗಿರುವುದು ಭಾರತೀಯ ಮಹಿಳೆಯರಿಗಾಗಿರುವ ಅವಮಾನ, ಸೋಲು. ಇದನ್ನು ಅವರೆಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ. ಸಹೋದರಿಯರ ಆಕ್ರೋಶಕ್ಕೆ ಮಹಿಳಾ ವಿರೋಧಿ ಕಾಂಗ್ರೆಸ್ ಮತ್ತದರ ಒಕ್ಕೂಟ ಭವಿಷ್ಯದಲ್ಲಿ ಸೋಲಿನ ಮೇಲೆ ಸೋಲು ಕಾಣಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು.
