ಬೆಳಗಾವಿ-23: ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬೆಳಗಾವಿ ನಗರದ ತ್ರಿವೇಣಿ ಹೊಟೇಲ್ ದಿಂದ ಸಿಬಿಎಸ್ (ಸೆಂಟ್ರಲ್ ಬಸ್ ಸ್ಟ್ಯಾಂಡ್) ಸರ್ಕಲ್ ವರೆಗೆ ಮತ್ತು ಕೀರ್ತಿ ಹೊಟೇಲ್ ಕ್ರಾಸ್ ದಿಂದ ಸಂಗೊಳ್ಳಿ ರಾಯಣ್ಣ (ಆರ್ಟಿಓ) ಸರ್ಕಲ್ ವರೆಗೆ ಎರಡೂ ಬದಿಯ ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಹನಗಳನ್ನು ನಿಲುಗಡೆಯನ್ನು ನಿಷೇಧಿಸಿ (ನೋ-ಪಾರ್ಕಿಂಗ್). ಅಂತ ಆದೇಶಿಸಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪಕ್ರಟಣೆಯಲ್ಲಿ ವಿಷಯ ತಿಳಿಸಿದ ಅವರು, ಕೃಷ್ಣದೇವರಾಯ (ಕೊಲ್ಲಾಪೂರ) ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿ ಕ್ರಾಸ್ ವರೆಗೆ ಎರಡೂ ಬದಿಯಲ್ಲಿ ರಸ್ತೆ ಸುರಕ್ಷತೆ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಹನಗಳ ನಿಲುಗಡೆಯನ್ನು ದಿನ ಬಿಟ್ಟು ದಿನ ಸಮ-ಬೆಸ ಸಂಖ್ಯೆಯ ದಿನಾಂಕಗಳಂತೆ ಎರಡೂ ಬದಿಯಲ್ಲಿ ವಾಹನಗಳನ್ನು ನಿಡುಗಡೆ ಮಾಡಲು ಆದೇಶಿಸಲಾಗಿರುತ್ತದೆ. ಈ ಮೇಲಿನಂತೆ ಮಾಡಲಾದ ಆದೇಶಗಳನ್ನು ಸಾರ್ವಜನಿಕರು ಅನುಸರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವುದು. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಮೋಟಾರು ವಾಹನ ಕಾಯ್ದೆ ಕಲಂ 190(2) ರಂತೆ ಕಾನೂನು ಕ್ರಮಗಳನ್ನು ಕೈಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಬೆಳಗಾವಿ ನಗರ ಮೊಲೀಸರೊಂದಿಗೆ ಸಹಕರಿಸಲು ತಿಳಿಸಿದ್ದಾರೆ.
ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಇತ್ತೀಚಿಗೆ ವಾಹನಗಳ ಸಂಚಾರವು ಹೆಚ್ಚಾಗಿದ್ದು, ಬೆಳಗಿನ ಹಾಗೂ ಸಾಯಂಕಾಲದ ಸಮಯದಲ್ಲಿ ಶಾಲಾ/ಕಾಲೇಜು ಮಕ್ಕಳು, ಪಾಲಕರು ಹಾಗೂ ಸಾರ್ವಜನಿಕರು ಮನೆಯಿಂದ ಶಾಲೆ/ಕಚೇರಿ ಗಳಿಗೆ ಹಾಗೂ ಹಾಗೂ ಶಾಲೆ/ಕಚೇರಿಗಳಿಂದ ಮನೆಗೆ ಸಂಚರಿಸುತ್ತಾರೆ. ನಗರದಲ್ಲಿ ಭಾರಿ ವಾಹನಗಳ ಸಂಚಾರದಿಂದಾಗಿ ಅಪಘಾತಗಳು ಸಂಭವಿಸಿ ಜೀವಹಾನಿ ಹಾಗೂ ಪ್ರಾಣಹಾನಿ ಉಂಟಾಗುತ್ತಿದ್ದು, ಶಾಲಾ/ಕಚೇರಿ ಪ್ರಾರಂಭ ಹಾಗೂ ಬಿಡುವಿನ ಸಮಯದಲ್ಲಿ ಶಾಲಾ ಮಕ್ಕಳ, ಪಾಲಕರ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಬೆಳಗ್ಗೆ 07.00 ಗಂಟೆಯಿಂದ 11.00 ಗಂಟೆವರೆಗೆ ಹಾಗೂ ಮಧ್ಯಾಹ್ನ 03.00 ಗಂಟೆಯಿಂದ ರಾತ್ರಿ 08.00 ಗಂಟೆವರೆಗೆ ನಗರದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಈ ಮೇಲಿನಂತೆ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಮೋಟಾರು ವಾಹನ ಕಾಯ್ದೆ ಕಲಂ 177 ರಂತೆ ಕಾನೂನು ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ. ನೋ-ಎಂಟ್ರಿ ನಿಯಮ ಉಲ್ಲಘಿಸಿದ ವಾಹನ ಚಾಲಕರ ವಿರುದ್ಧ 2025ನೇ ಸಾಲಿನಲ್ಲಿ 1001 ಪ್ರಕರಣಗಳನ್ನು ದಾಖಲಿಸಿ ರೂ.4,17,050=00 ದಂಡ ವಿಧಿಸಲಾಗಿರುತ್ತದೆ. ಇನ್ನು ಮುಂದೆಯೂ ಕೂಡ ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮಗಳನ್ನು ಕೈಕೊಳ್ಳಲಾಗುವುದು. ಕಾರಣ ಭಾರಿ ವಾಹನ ಚಾಲಕರು ಈ ಮೇಲಿನಂತೆ ಮಾಡಲಾದ ಆದೇಶವನ್ನು ಅನುಸರಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.
ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರದಿಂದ ದಟ್ಟಣಿ ಹೆಚ್ಚಾಗುತ್ತಿದ್ದು, ನಗರದಲ್ಲಿ ಭಾರಿ ವಾಹನಗಳ ಸಂಚಾರದಿಂದಾಗಿ ವಾಹನಗಳ ಸಂಚಾರದಿಂದಾಗಿ ಅಪಘಾತಗಳು ಸಂಭವಿಸಿ ಸಾರ್ವಜನಿಕರಿಗೆ ಗಾಯ/ತೀವ್ರ ಗಾಯ/ಪ್ರಾಣಹಾನಿ ಉಂಟಾಗುತ್ತಿರುತ್ತವೆ. ಸಾಯಂಕಾಲದ ಸಮಯದಲ್ಲಿ ನಗರದ ವಿವಿಧ ಸ್ಥಳಗಳಿಂದ ವಿಶೇಷವಾಗಿ ಸಂಗೊಳ್ಳಿ ರಾಯಣ್ಣ (ಆರ್ಟಿಓ) ವೃತ್ತ, ತ್ರಿವೇಣಿ ಹೊಟೇಲ್, ರಾಮದೇವ ಹೊಟೇಲ್, ಧರ್ಮವೀರ ಸಂಭಾಜಿ ವೃತ್ತ ಕಡೆಗಳಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರನ್ನು ಪಿಕ್-ಅಪ್ ಹಾಗೂ ಡ್ರಾಪ್ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿ ಸರ್ವಾಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿ ಬಸ್ಗಳು ನಗರದ ಹೊರ ವಲಯದಿಂದ ಪ್ರಯಾಣಿಕರನ್ನು ಪಿಕ್-ಅಪ್ ಹಾಗೂ ಡ್ರಾಪ್ ಮಾಡುವ ಕುರಿತು ಸಭೆಯನ್ನು ಏರ್ಪಡಿಸಿ 1)ಭರತೇಶ ಸ್ಕೂಲ್ (ಪೇ-ಪಾರ್ಕಿಂಗ್), 2)ಅಶೋಕ ನಗರ ಬೆಳಗಾವಿ ಒನ್ ಕೇಂದ್ರದ ಹಿಂದಿನ ಖಾಲಿ ಸ್ಥಳ (ಪೇ-ಪಾರ್ಕಿಂಗ್) ಹಾಗೂ 3)ಧರ್ಮನಾಥ ಸರ್ಕಲ್ ದಿಂದ ಅಶೋಕ ನಗರ ರಸ್ತೆ ಈ ಮೂರು ಕಡೆಗಳಲ್ಲಿ ಪ್ರತ್ಯೇಕ ಸ್ಥಳಗಳನ್ನು ಗುರ್ತಿಸಲಾಗಿರುತ್ತದೆ. ದಿನಾಂಕ: 27/01/2026 ರಿಂದ ಎಲ್ಲ ಖಾಸಗಿ ಬಸ್ ಚಾಲಕರು ಗುರ್ತಿಸಲಾದ ಈ ಮೂರು ಸ್ಥಳಗಳಿಂದಲೇ ಪ್ರಯಾಣಿಕರನ್ನು ಪಿಕ್-ಅಪ್ ಹಾಗೂ ಡ್ರಾಪ್ ಮಾಡುವುದು. ಖಾಸಗಿ ಬಸ್ ಮಾಲೀಕರು/ಚಾಲಕರು ಈ ಮೇಲಿನ ನಿರ್ದೇಶನಗಳನ್ನು ಅನುಸರಿಸಿ ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವುದು. ನಿಯಮಗಳನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಮೋಟಾರು ವಾಹನ ಕಾಯ್ದೆ ಪ್ರಕಾರ ಕಾನೂನು ರೀತ್ಯ ಕ್ರಮಗಳನ್ನು ಕೈಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಖಾಸಗಿ ಬಸ್ ಮಾಲೀಕರು/ಚಾಲಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.
