ಮೂಡಲಗಿ-27:ಕನ್ನಡ ಸಾಹಿತ್ಯ ಪರಿಷತ್ತು, ಮೂಡಲಗಿ ಹಾಗೂ ಶ್ರೀ ಶ್ರೀ ಶ್ರೀಪಾದಭೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಲಗಿ ಇವುಗಳ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ “ನಾಡ ಹಬ್ಬ” ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಜಾನಪದ ವಿದ್ವಾಂಸ ಡಾ.ಸಿ ಕೆ ನಾವಲಗಿ ಅವರು ಮಾತನಾಡುತ್ತಾ, ಇದು ಕೇವಲ ಹಬ್ಬವಲ್ಲ, ಇದು ನಮ್ಮ ಹುಟ್ಟೂರು ಪ್ರೀತಿಯ ಪ್ರತಿಜ್ಞೆ, ನಮ್ಮ ಭಾಷೆ ಸಂಸ್ಕೃತಿಗಳ ಗೌರವ,ನಮ್ಮ ಐಕ್ಯತೆಯ ಸಂಭ್ರಮವೆಂದರು. ಕರ್ನಾಟಕವೆಂಬ ಈ ಪವಿತ್ರ ಭೂಮಿ ಶಿಲ್ಪ -ಶಿಲ್ಪಿಗಳ, ಸಾಹಿತ್ಯ- ಕಲೆಗಳ,ವೀರರ- ಮಹಾಪುರುಷರ ನೆಲೆ. ಹಳಗನ್ನಡದಿಂದ ನವ ಕನ್ನಡದವರಿಗೆ ಸಾಗಿದ ಕನ್ನಡ ಭಾಷೆಯ ಐತಿಹಾಸಿಕ ಬೆಳವಣಿಗೆ, ಕದಂಬರಿಂದ ಹೊಯ್ಸಳರ ತನಕ ಹರಿದ ಸಾಂಸ್ಕೃತಿಕ ಕೀರ್ತಿ, ಕುವೆಂಪು – ದ ರಾ ಬೇಂದ್ರೆ ಮುಂತಾದ ಸಾಹಿತ್ಯ ಸಾಮ್ರಾಟ ಪರಂಪರೆ ಎಲ್ಲವೂ ಕರ್ನಾಟಕವನ್ನು ಸಮೃದ್ಧಿಗೊಳಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ, ಕನ್ನಡ ವಿಭಾಗದ ಮುಖ್ಯಸ್ಥ, ಶ್ರೀ ಬಿ ಸಿ ಹೆಬ್ಬಾಳ ಮಾತನಾಡುತ್ತಾ, ರಾಜ್ಯೋತ್ಸವ ಕೇವಲ ನಕ್ಷೆಯ ಏಕೀಕರಣವಲ್ಲ, ಮುಖ್ಯವಾಗಿ ಕನ್ನಡಿಗರ ಐಕ್ಯತೆ. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಬದುಕಿಸುವ ಸಂಕಲ್ಪವೆಂದರು.
ಕಾಲೇಜಿನ ಪ್ರಾಚಾರ್ಯ ಶ್ರೀ ಮಹೇಶ ಕಂಬಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ!ಸಂಜಯ ಅ ಶಿಂದಿಹಟ್ಟಿ, ಕಾರ್ಯದರ್ಶಿ ಶ್ರೀ ಎ ಎಚ್ ಒಂಟಗೋಡಿ ಹಾಜರಿದ್ದರು.
ಶ್ರೀ ಬಿ ಆರ್ ತರಕಾರ ಪ್ರಾಸ್ತಾವಿಕ ನುಡಿಗಳನ್ನು, ಶ್ರೀಮತಿ ಗೀತಾ ಹಿರೇಮಠ ಸ್ವಾಗತ ಹಾಗೂ ಶ್ರೀ ಶಿವಕುಮಾರ ಕೋಡಿಹಾಳ ಮತ್ತು ಶ್ರೀ ಶಿವಾನಂದ ಚಂಡಕೆ ನಿರ್ವಹಿಸಿ ವಂದಿಸಿದರು.
