ಬೆಳಗಾವಿ-20: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷದ ದುರಾಡಳಿತವೆ ಇವರ ಸಾಧನೆಯಾಗಿದ್ದು ಅದನ್ನು ಸಾರಲು ಮೈಸೂರಿನಲ್ಲಿ ಸಾಧನಾ ಸಮಾವೇಶ ಮಾಡಲಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಆಕ್ಷೇಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಮೈಸೂರಿನಲ್ಲಿ ಕಾಂಗ್ರೆಸ್ಸಿಗರ ಸಾಧನಾ ಸಮಾವೇಶ ಯಾವ ಪುರಷಾರ್ಥಕ್ಕಾಗಿ ನಡೆಯುತ್ತಿದೆ? ಜನರನ್ನು ನಂಬಿಸಿ ಗರಿಷ್ಠ ಬಹುಮತ ಪಡೆದು ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷ ಜನರಿಗೆ ದ್ರೋಹ, ಅನ್ಯಾಯ, ಭ್ರಷ್ಟಾಚಾರವನ್ನೇ ಮಾಡುತ್ತ ಬಂದಿದೆ. ಪ್ರಾರಂಭದ ದಿನದಿಂದ ಮುಡಾ, ವಾಲ್ಮೀಕಿ ನಿಗಮದಲ್ಲಿ ನಡೆದ ನೂರಾರೂ ಕೋಟಿರೂಪಾಯಿಗಳ ಅನೇಕ ಹಗರಣ ಮಾಡಿದೆ. ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ.
ಹಿರಿಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲೆಗೆ ಹೊಡೆದಂತೆ ಸುಳ್ಳು ಹೇಳಲು ಸಮಾವೇಶ ಮಾಡುತ್ತಿದ್ದಾರೆ. ಇವರಿಗೆ ಆತ್ಮಸಾಕ್ಷಿ ಬೇಕಲ್ಲವೇ, ಸುಳ್ಳನ್ನೇ ಸತ್ಯವೆಂದು ಹೇಳಿಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ನಿವೇಶನ ವಾಪಸ್ ಮಾಡಿದ ಮುಡಾ ಹಗರಣ, ಹಣ ಅವ್ಯವಹಾರ ಆದುದನ್ನು ಸ್ವತಃ ಸಿಎಂ ಒಪ್ಪಿಕೊಂಡ ವಾಲ್ಮೀಕಿ ನಿಗಮದ ಹಗರಣ ಸಂಬಂಧ ತುಟಿ ಪಿಟಿಕ್ ಅನ್ನುತ್ತಿಲ್ಲ ಮತ್ತೆ ದಲಿತರ ಉದ್ದಾರವೆ ನಮ್ಮ ಆಧ್ಯತೆ ಎನ್ನುವ ಇವರು ದಲಿತರ ಹಣ ಲಪಟಾಯಿಸಿ ಹಗರಣ ರೂವಾರಿಗಳೆ ಉದ್ದಾರ ಆಗಲಿದ್ದಾರೆ. ಅಧಿಕಾರಿಗಳ ಆತ್ಮಹತ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲ ಪ್ರತಿಯೊಂದರಲ್ಲೂ ಕಮಿಷನ್, ಹಗಲುದರೋಡೆ ವಿಚಾರ ಎತ್ತಿರುವ ಅವರದೆ ಪಕ್ಷದ ಶಾಸಕ ಬಿ.ಆರ್ ಪಾಟೀಲರಿಗೆ ಎನು ಹೇಳುತ್ತಾರೆ?
ಕೆಲವೆಡೆ ಕಮಿಷನ್ ಶೇ 100ಕ್ಕೆ ಏರಿದೆ. ಇನ್ನೂ ಕೆಲವು ಕಡೆ ಶೇ 80, ಶೇ 60 ಭ್ರಷ್ಟಾಚಾರ ಇವರದು. ದುಡ್ಡಿಲ್ಲದೇ ವರ್ಗಾವಣೆ ಇಲ್ಲ. ಈ ಸಂಬಂಧ ಎಷ್ಟೋ ಜನರು ದಲಿತ ವರ್ಗಕ್ಕೆ ಸೇರಿದಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀಸಲಾತಿ ಕೇಳಲು ಬಂದ ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಇದು ಕೊಲೆಗಡುಕರ, ಸಾವಿನ ಹಾಗೂ ಹಗರಣಗಳ ರಾಜರ ಸರಕಾರ (ಸ್ಕ್ಯಾಮ್ ಕಿಂಗ್ಸ್) ಎಂದು ಆರೋಪಿಸಿದ್ದಾರೆ.
