25/06/2026
IMG-20260623-WA0005

ಬೈಲಹೊಂಗಲ-23: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜಕೀಯ ಜಿದ್ದಾಜಿದ್ದಿನ ಶಕ್ತಿ ಪ್ರದರ್ಶನದಿಂದ ಇಡೀ ರಾಜಧಾನಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿ ಕಡುಬಡತನದಲ್ಲೂ ವರ್ಷವಿಡೀ ಕಷ್ಟಪಟ್ಟು ಓದಿದ ಹತ್ತಾರು ಬಡ ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲಾಗದೆ, ಕೊನೆ ಕ್ಷಣದಲ್ಲಿ ನೀಟ್ (NEET) ಮರುಪರೀಕ್ಷೆ ಬರೆಯುವ ಮಹತ್ವದ ಅವಕಾಶವನ್ನು ಕಳೆದುಕೊಂಡು ಪರೀಕ್ಷಾ ಕೇಂದ್ರಗಳ ಮುಂದೆ ಕಣ್ಣೀರು ಹಾಕುತ್ತಿರುವುದು ಅತ್ಯಂತ ಖಂಡನೀಯ, ಈ ವಿದ್ಯಾರ್ಥಿಗಳ ಮರಗು ಕಾಂಗ್ರೆಸ್ ‌ಪಕ್ಷಕ್ಕೆ ತಟ್ಟಲಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು,ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಕಾರಣಕ್ಕಾಗಿ ವಿದ್ಯಾರ್ಥಿಗಳು ನೀಟ್-ಯುಜಿ (NEET-UG) ಮರುಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು (ಆರ್.ಸಿ. ಕಾಲೇಜು) ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ; ಇವರಲ್ಲಿ ಇಬ್ಬರು ಕಾಂಗ್ರೆಸ್ ಸಮಾವೇಶದಿಂದ ಉಂಟಾದ ಭಾರಿ ಟ್ರಾಫಿಕ್ ಜಾಮ್‌ನಿಂದಾಗಿ ಮಧ್ಯಾಹ್ನ 1:30 ರ ಗೇಟ್ ಕ್ಲೋಸಿಂಗ್ ಸಮಯ ಮುಗಿದ ನಂತರ ಪರೀಕ್ಷೆ ಕೇಂದ್ರ ತಲುಪಿದರು.
ಮುಂಚಿತವಾಗಿಯೇ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮಾಹಿತಿ ಇದ್ದರೂ, ಹಠಕ್ಕೆ ಬಿದ್ದಂತೆ ಅದ್ದೂರಿ ರ‍್ಯಾಲಿ ಆಯೋಜಿಸಿ ರಸ್ತೆಗಳನ್ನೆಲ್ಲಾ ಬಂದ್ ಮಾಡಿದ ಕಾಂಗ್ರೆಸ್ ನಾಯಕರು ಯುವಜನರ ಕನಸನ್ನು ನಡುರಸ್ತೆಯಲ್ಲೇ ಕರಗಿಸಿದ್ದಾರೆ. ಒಂದೆಡೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋಲ್ಕತ್ತಾದಿಂದ ದೆಹಲಿಗೆ ಬಂದಿಳಿದಾಗ ತಮ್ಮ ವಿವಿಐಪಿ (VVIP) ಭದ್ರತಾ ಕಾನ್ವಾಯ್ ಚಲನೆಯಿಂದ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ದಟ್ಟಣೆ ಉಂಟಾಗಬಾರದು ಎಂದು ಮಧ್ಯಾಹ್ನ 1:15 ರಿಂದ ಪರೀಕ್ಷೆ ಆರಂಭವಾಗುವವರೆಗೂ ಬರೋಬ್ಬರಿ 45 ನಿಮಿಷಗಳ ಕಾಲ ವಿಮಾನ ನಿಲ್ದಾಣದ ಲಾಂಜ್‌ನಲ್ಲೇ ಕಾಯುವ ಮೂಲಕ ಯುವಶಕ್ತಿಯ ಮೇಲಿರುವ ನೈಜ ಕಾಳಜಿಯನ್ನು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಆದರೆ ಮತ್ತೊಂದೆಡೆ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಪರೀಕ್ಷೆಗಳ ಬಗ್ಗೆ ಕಸರತ್ತಿನ ಮೊಸಳೆ ಕಣ್ಣೀರು ಸುರಿಸುತ್ತಾ, ಅಧಿಕಾರದ ಹಪಾಹಪಿಗೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಬಲಿಪೀಠಕ್ಕಿಟ್ಟಿದ್ದಾರೆ.
ಟ್ರಾಫಿಕ್‌ನಿಂದಾಗಿ ತಡವಾಗಿ ಬಂದ ವಿದ್ಯಾರ್ಥಿನಿಯರನ್ನು ಕರುಣೆಯಿಲ್ಲದೆ ಗೇಟ್‌ನಿಂದ ಹೊರಗಟ್ಟಿದಾಗ ಪೋಷಕರು ಅನುಭವಿಸಿದ ಯಾತನೆಗೆ ಈ ಸರ್ಕಾರವೇ ನೇರ ಹೊಣೆಯಾಗಿದೆ. ಈ ಬೇಜವಾಬ್ದಾರಿ ಸರ್ಕಾರ ತಕ್ಷಣವೇ ನೊಂದ ವಿದ್ಯಾರ್ಥಿ ಸಮೂಹದ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಅವರಿಗೆ ನ್ಯಾಯ ಒದಗಿಸಬೇಕು. ಅಧಿಕಾರದ ಮದದಲ್ಲಿ ಯುವಶಕ್ತಿಯನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ರಾಜ್ಯದ ಯುವಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಫ್.ಎಸ್.ಸಿದ್ದನಗೌಡರ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!