ಬೆಳಗಾವಿ-25 : ಶ್ರೀರಾಮ್ ಕಾಲೋನಿ, ಸಾಯಿ ನಗರ, ಗೋಕುಲ್ ನಗರ ಮತ್ತು ವಿನಾಯಕ್ ನಗರ ವ್ಯಾಪ್ತಿಯ ಕಳೆದ 20 ವರ್ಷಗಳಿಂದ ಅಪೂರ್ಣವಾಗಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ತಕ್ಷಣ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ,ಮುತಗಾ ಗ್ರಾಮ ಪಂಚಾಯತ್ ಸದಸ್ಯ ರವಿ ಕೋಟಬಾಗಿ ನೇತೃತ್ವದ ನಿವಾಸಿಗಳು ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಮ್ಮ ವ್ಯಾಪ್ತಿಯ ಈ ನಾಲ್ಕು ಕಾಲೋನಿಗಳಲ್ಲಿ ಕಳೆದ ಎರಡು ದಶಕಗಳಿಂದ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.
ರಸ್ತೆಗಳು ಸಂಪೂರ್ಣ ಹದಗೆಟ್ಟು ದೊಡ್ಡ ಹೊಂಡಗಳಾಗಿವೆ. ವೃದ್ಧರು, ಮಕ್ಕಳು, ಆ್ಯಂಬುಲೆನ್ಸ್ ಓಡಾಡಲೂ ಪರದಾಡುವಂತಾಗಿದೆ. ವೈಜ್ಞಾನಿಕ ಒಳಚರಂಡಿ ಇಲ್ಲ. ಮಳೆಗಾಲದಲ್ಲಿ ಕೊಳಚೆ ನೀರು ಮನೆ ಮುಂದೆ ಹರಿದು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಮನವಿ ತಿಳಿಸಿದರು
ನಿಯಮಿತವಾಗಿ ಕಸ ಸಂಗ್ರಹಣೆ ಆಗುತ್ತಿಲ್ಲ. ರಸ್ತೆ ಬದಿಯಲ್ಲೇ ಕಸದ ರಾಶಿ, ದುರ್ವಾಸನೆಯಿಂದ ಆರೋಗ್ಯ ಹಾಳಾಗುತ್ತಿದೆ.
20 ವರ್ಷದಿಂದ ತೆರಿಗೆ ಕಟ್ಟುತ್ತಿದ್ದರೂ ಸೂಕ್ತ ಸೌಕರ್ಯ ಸಿಗುತ್ತಿಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಚರ್ಚಿಸಿದರೂ ಅನುದಾನದ ಕೊರತೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ.
ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಿನಂತಿಸಿಕೊಳ್ಳುವುದೇನೆಂದರೆ, ತಕ್ಷಣ ವಿಶೇಷ ಅನುದಾನ ಬಿಡುಗಡೆ ಮಾಡಿ ರಸ್ತೆ-ಚರಂಡಿ ಪೂರ್ಣಗೊಳಿಸಬೇಕು ಹಾಗೂ ಪ್ರತಿದಿನ ಕಸ ವಿಲೇವಾರಿಗೆ PDO ಹಾಗೂ ತಾ.ಪಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಆಗ್ರಹಿಸಿದರು.
ಈ ವೇಳೆ ರವಿ ಕೋಟಬಾಗಿ, ವಿನೋದ ಕರ್ಲಾ, ರಮೇಶ ದೇಶಪಾಂಡೆ, ಪ್ರಕಾಶ ಹರದಿ, ಕುಂಬಾರ ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.
